ಗೋಕರ್ಣ(Gokarna): ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ (Rama Bhakti) ಮೋಕ್ಷ ಸಾಧನೆಯಾಗುತ್ತದೆ ಎಂದು ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ (Chathurmasya) ಕೈಗೊಂಡಿರುವ ಶ್ರೀಗಳು ೨೪ನೇ ದಿನವಾದ ಮಂಗಳವಾರ ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಜೀವಯಾನ ಒಂದರ್ಥದಲ್ಲಿ ದೇವಯಾನ; ಜೀವ-ದೇವ ಯಾನ ಎಂದ ಶ್ರೀಗಳು, ರಾಮಾವತಾರದ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ನಿರ್ಯಾಣದ ಪಯಣವನ್ನು ಬಣ್ಣಿಸಿದರು.
ರಾಮಾವತಾರದ ಕೊನೆಯ ದಿನಗಳಲ್ಲಿ ತಾಪಸನೊಬ್ಬ ಬಂದು ಲಕ್ಷ್ಮಣ ಬಳಿ ಬಂದು ರಾಮನ ಭೇಟಿಯ ಇಂಗಿತ ವ್ಯಕ್ತಪಡಿಸುತ್ತಾನೆ. ಅದರಂತೆ ರಾಮನ ಬಳಿಗೆ ಆತನನ್ನು ಕರೆತಂದಾಗ, ಇಬ್ಬರು ಮಾತ್ರ ಮಾತನಾಡಬೇಕೆಂದು, ನಮ್ಮಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡರೆ ಆತನಿಗೆ ಮೃತ್ಯುದಂಡ ನೀಡಬೇಕೆಂದು ಷರತ್ತು ವಿಧಿಸುತ್ತಾನೆ. ಬಾಗಿಲಲ್ಲಿ ನಿಂತು ಕಾಯುವಂತೆ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅಲ್ಲಿಗೆ ಬಂದ ತಾಪಸಿ ನಿಜವಾಗಿ ಬ್ರಹ್ಮದೇವ ಕಳುಹಿಸಿಕೊಟ್ಟ ಕಾಲಪುರುಷನಾಗಿದ್ದ. ಯಮ ಕಾಲಾತ್ಮಕನಾಗಿ ಅಲ್ಲಿಗೆ ಬಂದಿದ್ದ ಎಂದು ವಿವರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಬಡವರಿಗೆ ಅವಧಿ ಮೀರಿದ ಔಷಧಿ !?
“ರಾಮಾವತಾರಕ್ಕೆ ಹನ್ನೊಂದು ಸಾವಿರ ವರ್ಷಗಳ ಅವಧಿಯನ್ನು ನೀನೇ ವಿಧಿಸಿಕೊಂಡಿದ್ದಿ. ನೀನು ಹೇಳಿದ ಅವಧಿ ಮುಗಿಯುತ್ತಾ ಬಂದಿದೆ. ಮನುಷ್ಯ ಅವತಾರದ ಅವಧಿ ಮುಗಿಯಿತು ಎನ್ನುವ ಸ್ಥಿತಿ ನಮ್ಮದಲ್ಲ; ರಾಮರಾಜ್ಯವನ್ನು ಮುನ್ನಡೆಸಲು ಭೂಮಿಯ ಮೇಲೆ ಇನ್ನೂ ಕೆಲ ಕಾಲ ಇರುವ ಇಚ್ಛೆ ನಿನಗಿದ್ದರೆ ಅದನ್ನು ಪಾಲಿಸುತ್ತೇವೆ” ಎಂಬ ಬ್ರಹ್ಮನ ಸಂದೇಶವನ್ನು ಕಾಲ ವಿವರಿಸುತ್ತಾನೆ. ಮೂರು ಲೋಕಗಳ ಕಲ್ಯಾಣಕ್ಕಾಗಿ ನಾನು ಅವತಾರವೆತ್ತಿದ ಕಾರ್ಯ ಮುಗಿಯಿತು. ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು ರಾಮ ಸಮ್ಮತಿ ನೀಡುತ್ತಾನೆ ಎಂದರು.
ಇದನ್ನೂ ಓದಿ : ಭಟ್ಕಳ ರೋಟರಿ ಕ್ಲಬ್ ಪದಗ್ರಹಣ
ಆ ಹಂತದಲ್ಲಿ ದೂರ್ವಾಸ ಮುನಿಗಳ ಆಗಮನವಾಗುತ್ತದೆ. ಜರೂರಾರಿ ರಾಮನ ಭೇಟಿಗೆ ಆಗ್ರಹಪಡಿಸಿದ್ದು, ಲಕ್ಷ್ಮಣನನ್ನು ಸಂದಿಗ್ಧತೆಗೆ ಸಿಲುಕಿಸುತ್ತದೆ. ರಾಮನ ಆಜ್ಞೆಯ ಅರಿವಿದ್ದರೂ, ಪರರ ಹಿತಕ್ಕಾಗಿ ತಾನು ಮೃತ್ಯುದಂಡ ಸ್ವೀಕರಿಸಲು ಸಿದ್ಧನಾಗಿ ರಾಮನ ಭೇಟಿಗೆ ತೆರಳುತ್ತಾನೆ. ತಕ್ಷಣವೇ ರಾಮ ದೂರ್ವಾಸರಲ್ಲಿಗೆ ಬಂದು ಪ್ರೀತಿಯಿಂದ ಉಪಚರಿಸುತ್ತಾನೆ. ರಾಮ ತನ್ನ ಪ್ರಾಣವೇ ಆಗಿದ್ದ ಲಕ್ಷ್ಮಣನಿಗೆ ಮೃತ್ಯುದಂಡ ವಿಧಿಸುವ ಸಂದಿಗ್ಧತೆಗೆ ಸಿಲುಕಿದ. ಅತಿಯಾದ ವ್ಯಥೆಯಾಯಿತು. ಅಧೋಮುಖ ದೃಷ್ಟಿಯೊಂದಿಗೆ ರಾಮ ನಿಂತಿದ್ದಾಗ ಲಕ್ಷ್ಮಣ ದೇಶಕ್ಕೆ ಬರುವ ಶಾಪ ತಪ್ಪಿಸುವ ಉದ್ದೇಶದಿಂದ ತಾನೇ ಕೈಯಾರೆ ಆಹ್ವಾನಿಸಿಕೊಂಡ ಸಾವಿಗೆ ಸಜ್ಜಾಗುತ್ತಾನೆ. ಆಗ ವಸಿಷ್ಠರು ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ರಾಮನಿಗೆ ಸೂಚಿಸಿದರು. ಕೊನೆಗೂ ಧರ್ಮ ಉಳಿಸುವ ಸಲುವಾಗಿ ಲಕ್ಷ್ಮಣನ ವಿಸರ್ಜನೆಗೆ ರಾಮ ನಿರ್ಧರಿಸಿದ. ಸರಯೂ ನದಿಗೆ ತೆರಳಿದ ಲಕ್ಷ್ಮಣ ಕುಂಭಕದ ಮೂಲಕ ಪ್ರಾಣತ್ಯಾಗ ಮಾಡಿದ. ಆಗ ಪುಷ್ಪವೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಆಗಸ್ಟ್ ೧೩ರಂದು ವಿವಿಧೆಡೆ ಅಡಿಕೆ ಧಾರಣೆ
ಇದಾದ ಬಳಿಕ ರಾಮ ಭರತನನ್ನು ಕರೆದು, ತಾನೂ ಲಕ್ಷ್ಮಣನಿರುವಲ್ಲಿಗೆ ಹೋಗುತ್ತೇನೆ; ರಾಜ್ಯಾಧಿಕಾರವನ್ನು ಭರತನಿಗೆ ಒಪ್ಪಿಸಲು ಮುಂದಾದ. ಅದಕ್ಕೆ ನಿರಾಕರಿಸಿದ ಭರತ ತಾನೂ ರಾಮನೊಂದಿಗೆ ಬರುವ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಲವ- ಕುಶರಿಗೆ ರಾಜ್ಯ ಒಪ್ಪಿಸುವಂತೆ ಸಲಹೆ ನೀಡುತ್ತಾನೆ. ಇಡೀ ಪ್ರಕೃತಿ ರಾಜನಿಗೆ ನಮಸ್ಕರಿಸುವಾಗ ವಸಿಷ್ಠರು ಎಲ್ಲ ಜನರ ಕೋರಿಕೆ ಈಡೇರಿಸುವಂತೆ ಸಲಹೆ ನೀಡಿದರು. ಎಲ್ಲರೂ ರಾಮನನ್ನು ಹಿಂಬಾಲಿಸುವ ನಿರ್ಧಾರಕ್ಕೆ ಬಂದರು. ಅದಕ್ಕೂ ರಾಮ ಒಪ್ಪುತ್ತಾನೆ. ಲವ ಕುಶರಿಗೆ ಪಟ್ಟಾಧಿಕಾರ ನೀಡಿ ಸಲಹೆ ಸೂಚನೆಗಳನ್ನು ನೀಡಿ ಮಹಾನಿರ್ಯಾಣಕ್ಕೆ ಮುಂದಾಗುತ್ತಾನೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಪೊಲೀಸ್ ಅಧೀಕ್ಷಕರಿಗೊಂದು ಬಹಿರಂಗ ಪತ್ರ
ವಾನರ- ರಾಕ್ಷಸರು ಕೂಡಾ ಅಲ್ಲಿಗೆ ಬಂದು ರಾಮನೊಂದಿಗೆ ಬರುವ ಪ್ರತಿಜ್ಞೆ ಮಾಡುತ್ತಾರೆ. ವಿಭೀಷಣನನ್ನು ಇಲ್ಲೇ ಇರಿಸಿ ಧರ್ಮಪರಿಪಾಲನೆಗೆ ಇಕ್ಷ್ವಾಕು ವಂಶದ ಕುಲದೇವತೆಯನ್ನು ಪೂಜಿಸುವಂತೆ ಆದೇಶ ಮಾಡುತ್ತಾನೆ. ರಾಮಕಥೆ ವ್ಯಾಪಿಸಿರುವವರೆಗೂ ಜಗತ್ತಿನಲ್ಲಿ ಇರಬೇಕು ಎಂದು ಹನುಮಂತನಿಗೆ ಸೂಚಿಸುತ್ತಾನೆ. ಕಲಿಯುಗ ಬರುವವರೆಗೆ ಜಾಂಬವಂತನಿಗೆ ಸೂಚನೆ ಇತ್ತು ಎಲ್ಲರೊಂದಿಗೆ ಮಹಾಪ್ರಸ್ಥಾನಕ್ಕೆ ಹೊರಟು ನಿಂತ ಎಂದು ವಿವರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ
ರಾಮನ ನಾಮಕರಣ, ವಿವಾಹ, ಪಟ್ಟಾಭಿಷೇಕ ವಿಧಿಗಳನ್ನು ನೆರವೇರಿಸಿದ್ದ ವಸಿಷ್ಠರು ಮಹಾಪ್ರಸ್ಥಾನದ ವಿಧಿಗಳನ್ನು ಪೂರೈಸಿದರು. ರಾಮ ಸೀತೆಯನ್ನು ತ್ಯಜಿಸಿರಲಿಲ್ಲ ಎನ್ನುವುದಕ್ಕೆ ಅಗ್ನಿಹೋತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಾಪ್ರಸ್ಥಾನದ ಜತೆಗೆ ವಾಜಪೇಯದ ಶ್ವೇತಛತ್ರ ಶೋಭೆಯಾಗಿ ಬೆಳಗುತ್ತಿರುವಾಗ ರಾಮ ಅರಮನೆಯಿಂದ ಹೊರಬರುತ್ತಾನೆ. ಕೈಯಲ್ಲಿ ದರ್ಭೆ ಹಿಡಿದು ಓಂಕಾರ ಪಠಿಸುತ್ತಾ ಬಂದಾಗ ಸೂರ್ಯತೇಜಸ್ಸಿನಿಂದ ಕಂಗೊಳಿಸಿದ ಎಂದರು.
ಇದನ್ನೂ ಓದಿ : ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ
ಪ್ರಕೃತಿ ಎರಡು ರೂಪದಿಂದ ಪ್ರಕಟವಾಗಿ ರಾಮನ ಇಕ್ಕೆಲಗಳಲ್ಲಿ ಶೋಭಿಸುತ್ತಾಳೆ. ಬಲಭಾಗದ ದೇವಿ ಮೋಕ್ಷವನ್ನೂ ಎಡಭಾಗದ ದೇವಿ ಶ್ರೇಯಸ್ಸನ್ನೂ ನೀಡುವಂಥದ್ದು. ರಾಮನ ಬಾಣಗಳು ಪುರುಷರೂಪದಿಂದ ನಿಂತವು. ರಾಮಧನಸ್ಸು ಕೂಡಾ ಪುರುಷರೂಪದಲ್ಲಿ ನಿಂತಿತು. ವೇದಗಳು ಬ್ರಾಹ್ಮಣರಾಗಿ, ವೇದಮಾತೆ ಗಾಯತ್ರಿಯೂ ಪ್ರಕಟಗೊಂಡರು ಎಂದು ಬಣ್ಣಿಸಿದರು.
ಇದನ್ನೂ ಓದಿ : ನಾಳೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ
ರಾಮ ಮಹಾಪ್ರಸ್ಥಾನದ ಬಳಿಕ ಅಯೋಧ್ಯೆಯಲ್ಲಿ ಜೀವ ಇರುವ ಯಾವುದೂ ಉಳಿಯಲಿಲ್ಲ. ಸಮಷ್ಟಿ ಚೈತನ್ಯ ಅಲ್ಲಿಗೆ ಹರಿದಿತ್ತು. ಅಯೋಧ್ಯ ಶೂನ್ಯವಾಯಿತು. ಅರ್ಧಯೋಜನ ಪಯಣದ ಬಳಿಕ ಸರಯೂ ನದಿಯ ದರ್ಶನ ಪಡೆದು ಅನುಸರಿಸಿ ಮಹಾನಿರ್ಯಾಣ ಸ್ಥಳಕ್ಕೆ ರಾಮ ಬಂದ. ಧರ್ಮದೇವ ಎಲ್ಲ ದೇವತೆಗಳ ಒಡಗೂಡಿ ಸ್ವಾಗತಕ್ಕೆ ಬರುತ್ತಾನೆ. ಆ ಮಂಗಲಮಯ ವಾತಾವರಣದಲ್ಲಿ ರಾಮ ಸರಯೂ ನದಿಯಲ್ಲಿ ಪಾದವಿಡುತ್ತಾನೆ. ಆಗ ವರುಣದೇವ ಸ್ವಾಗತಿಸಿ, ಮೂಲರೂಪವನ್ನು ತಾಳುವಂತೆ ಕೋರುತ್ತಾನೆ ಎಂದು ವಿವರಿಸಿದರು.
ಇದನ್ನೂ ಓದಿ : ರಂಗಾಯಣಗಳಿಗೆ ನಿರ್ದೇಶಕರ ನೇಮಕ
ರಾಮ ಮಹಾಪ್ರಸ್ಥಾನದ ವೇಳೆ ವಿಷ್ಣುರೂಪದಲ್ಲಿ ಐಕ್ಯನಾದ ಬಳಿಕವೂ ತನ್ನೊಂದಿಗೆ ಬಂದ ಎಲ್ಲರಿಗೂ ಅತ್ಯುತ್ತಮ ಗತಿಯನ್ನು ನೀಡುವಂತೆ ಬ್ರಹ್ಮದೇವನಿಗೆ ಸೂಚಿಸುತ್ತಾನೆ. ರಾಮನ ಜತೆಗೆ ಬಂದಿದ್ದ ಎಲ್ಲರೂ ಸರಯೂ ನದಿಯಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಕಥಾವಸ್ತುವನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ : ರಂಗಾಯಣಗಳಿಗೆ ನಿರ್ದೇಶಕರ ನೇಮಕ
ಸುಮಾರು ೩೫೦ ವರ್ಷಗಳ ಪಂಚಾಂಗಗಳ ಸಂಗ್ರಹವನ್ನು ಜಯಾ ಪಂಡಿತ್ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಸುಧಾಕರ ಬಡಗಣಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್, ಪಿಯು ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.