ಭಟ್ಕಳ: “ರಕ್ತದ ಅವಶ್ಯಕತೆಯು ನಿರಂತರವಾಗಿದ್ದು, ಪ್ರತಿ ರಕ್ತ ದಾನವು (blood donation) ಮೂರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ” ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಎಸ್ ಜಯಕರ್ ಶೆಟ್ಟಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಘಟಕಗಳಾದ ರೋಟರಾಕ್ಟ್ ಕ್ಲಬ್ ಭಟ್ಕಳ, ಯೂಥ್ ರೆಡ್ ಕ್ರಾಸ್, ಎನ್.ಎಸ್.ಎಸ್, ಉನ್ನತ ಭಾರತ ಅಭಿಯಾನ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ರಕ್ತದಾನ ಶಿಬಿರ (blood donation camp) ಉದ್ಘಾಟಿಸಿ ಮಾತನಾಡಿದ ಅವರು, “ರಕ್ತದಾನವು ಸಮಾಜಕ್ಕೆ ನೀಡುವ ಉತ್ತಮ ಕೊಡುಗೆಯಾಗಿದೆ, ದಾನ ಮಾಡಿದ ಪ್ರತಿಯೊಂದು ಹನಿ ರಕ್ತದಿಂದ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು, ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿರುವವರನ್ನು ಮತ್ತು ತುರ್ತು ಚಿಕಿತ್ಸೆಗೆ ಒಳಗಾದವರನ್ನು ಬದುಕಿಸಬಹುದಾಗಿದೆ” ಎಂದರು.

ಇದನ್ನು ಓದಿ: Devil/ ಡೆವಿಲ್ ಮೊದಲ ದಿನ ಭರ್ಜರಿ ಕಲೆಕ್ಷನ್

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಚ್ಡಿಎಫ್ಸಿ ಬ್ಯಾಂಕ್‌ನ ಕಾರ್ಯಾಚರಣಾ ವ್ಯವಸ್ಥಾಪಕಿ ವಾಣಿ ಭಟ್ ಮಾತನಾಡಿ, “ಭಾರತದಲ್ಲಿ ಪ್ರತಿದಿನ ಸರಾಸರಿ ೩೮೦೦೦ ಯೂನಿಟ್ ರಕ್ತದ ಅವಶ್ಯಕತೆ ಇದೆ. ಎಚ್ಡಿಎಫ್ಸಿ ಬ್ಯಾಂಕ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ೨೦೦೭ ರಿಂದ ‘ಪರಿವರ್ತನ್ ಎಂಬ ಅಭಿಯಾನ ಹಮ್ಮಿಕೊಂಡಿದ್ದು ಈ ಮೂಲಕ ರಕ್ತದ ಅವಶ್ಯಕತೆಯನ್ನು ಪೂರೈಸುವ ಕೆಲಸ ಮಾಡುತ್ತಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಸುರೇಶ ವಿ ನಾಯಕ್ ಮಾತನಾಡಿ, ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ಈ ಸಂದರ್ಭ ದಲ್ಲಿ ಸತತ ೩೫ ಬಾರಿ ರಕ್ತದಾನಗೈದ ಸಮಾಜ ಸೇವಕ, ರೋಟರಿ ಪ್ರಮುಖ ನಜೀರ್ ಖಾಸಿಂಜೀ ಅವರನ್ನು ಗೌರವಿಸಲಾಯಿತು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್, ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ, ಭೋದಕ – ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ರೋಟರಾಕ್ಟ್ ಅಧ್ಯಕ್ಷೆ ನೇಹಾ ಭಂಡಾರಿ ಸ್ವಾಗತಿಸಿದರು, ಸದಸ್ಯರುಗಳಾದ ವಿನುತಾ ನಿರೂಪಿಸಿದರು ಹಾಗು ದೀಕ್ಷಾ ನಾಯ್ಕ್ ವಂದಿಸಿದರು. ಶಿಬಿರದಲ್ಲಿ ಒಟ್ಟು ೪೭ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.