
* ಈಶ್ವರ ನಾಯ್ಕ ಭಟ್ಕಳ.
Readers letter/ ಕೆಳಸೇತುವೆ ವಿಚಾರವನ್ನಿಟ್ಟುಕೊಂಡು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಲು ಬಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು (MP Kageri) ಜನರ ಪ್ರತಿನಿಧಿಯಾಗಿ ಕಾಣಿಸಲಿಲ್ಲ. ರಾಷ್ಟ್ರೀಯ ಹೆದ್ದಾರಿಯ (National Highway) ಅವೈಜ್ಞಾನಿಕ ಕಾಮಗಾರಿಯಲ್ಲಿ ಬೀದಿ ಹೆಣವಾಗಿದ್ದು ಸ್ಥಳೀಯರು. ಆ ದಿಸೆಯಲ್ಲಿ ಇಂತಹ ಸಾವು ನೋವುಗಳನ್ನು ಕಂಡ ಇವರಿಗೆ ರೋಷ ಉಕ್ಕುವುದರಲ್ಲಿ ಅರ್ಥವಿದೆ. ಆದರೆ ನೀವು ಹೊತ್ತು ತಂದ ಸಂಧಾನ ಸೂತ್ರವನ್ನು ಸಾರ್ವಜನಿಕರು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಒಬ್ಬ ಅನುಭವಿ ರಾಜಕಾರಣಿಯಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಜನರ ಮೇಲೆ ಹರಿಹಾಯುವುದು ಎಷ್ಟರಮಟ್ಟಿಗೆ ಸರಿ?
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಕನ್ನಡಿಗರು ನಿಮ್ಮನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದದ್ದು ನಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂಬ ಉದ್ದೇಶದಿಂದಲೇ ಹೊರತು ನೀವು ಹೇಳಿದ ಹಾಗೇ ಕೇಳಿಕೊಂಡು ಬಿದ್ದಿರುವುದಕ್ಕಲ್ಲ. ಒಬ್ಬ ಸಂಸದ ಕಾಡಿಬೇಡಿ ತನ್ನ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನೇ ಮಂಜೂರು ಮಾಡಿಸಿಕೊಂಡು ಬಂದ ಉದಾಹರಣೆ ನಮ್ಮ ಕಣ್ಮುಂದೆ ಇರುವಾಗ ಉತ್ತರ ಕನ್ನಡದಾದ್ಯಂತ ತೀರಾ ಅಗತ್ಯ ಇದ್ದ ಕಡೆ ಕೆಳಸೇತುವೆಯನ್ನು ಮಂಜೂರಾತಿ ಮಾಡಲು ಪ್ರಚಂಡ ಬಹುಮತದಿಂದ ಆಯ್ಕೆಯಾದ ತಮ್ಮಿಂದ ಸಾಧ್ಯವಾಗದೆ ಇರುವುದು ಹಾಗೂ ಜನರ ಬಳಿ ಬಂದು ಕಾಗಕ್ಕ ಗುಬ್ಬಕ್ಕನ ಕಥೆ ಹೇಳುವುದು ಸಮಂಜಸವಲ್ಲ. ಅಷ್ಟಕ್ಕೂ ಈ ಪರಿ ಜನಾಕ್ರೋಶ ಕಾರಣವಿಲ್ಲ ಎಂದುಕೊಂಡಿದ್ದೀರಾ ಸಂಸದರೆ?
ವಿಡಿಯೋ ಸಹಿತ ಇದನ್ನೂ ಓದಿ : Under Pass/ ಗ್ರಾಮಸ್ಥರಿಂದ ಸಂಸದ ಕಾಗೇರಿ ತರಾಟೆಗೆ
ಕಳೆದ ಕೆಲವು ವರ್ಷಗಳಿಂದ ಉತ್ತರ ಕನ್ನಡದಾದ್ಯಂತ ನಡೆಯುವ ರಸ್ತೆ ಅಪಘಾತಗಳು ಹಾಗೂ ಅಂತಹ ಅಪಘಾತ ಸಂಭವಿಸಿ ಸಾವನಪ್ಪುವವರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ. ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿ ನಡೆಯುತ್ತಿರುವ ವರ್ಷದಿಂದಲೂ ರಸ್ತೆ ಅಪಘಾತ ಸರ್ವೆಸಾಮಾನ್ಯ ಎಂಬಂತಿದೆ. ಇತ್ತೀಚೆಗೆ ನಡೆದ ಅಪಘಾತಗಳು ಕೊಂಚ ಭಯವನ್ನು ಹುಟ್ಟಿಸುತ್ತದೆ. ಮತ್ತೊಬ್ಬರ ಮನೆಯಲ್ಲಿ ಉರುಳುವ ಹೆಣಗಳು ನಮಗೆ ಆ ಪ್ರಮಾಣದಲ್ಲಿ ಭಾದಿಸುವುದಿಲ್ಲ. ಆದರೆ ಒಮ್ಮೆ ಅವರ ಸ್ಥಾನದಲ್ಲಿ ನಿಂತು ನೋಡಿದಾಗ ಕೊಂಚವಾದರೂ ಅದು ನಮ್ಮ ಹೃದಯಕ್ಕೆ ತಟ್ಟುತ್ತದೆ. ಹೀಗೆ ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಿ ತಮ್ಮರನ್ನು ಕಳೆದುಕೊಂಡವರ ಹಾನಿಯನ್ನು ತುಂಬಿಸಲು ಬಹುಶಃ ಯಾರಿಂದಲೂ ಸಾಧ್ಯವಾಗದೇನೋ. ದೇವರು ಮನುಷ್ಯನಿಗೆ ಮರೆವನ್ನು ನೀಡಿದರಿಂದ ಬದುಕು ಮುಂದುವರಿಸಬೇಕಷ್ಟೇ.
ವಿಡಿಯೋ ಸಹಿತ ಇದನ್ನೂ ಓದಿ : Mari Jathre/ ಮನೆಯ ಹಬ್ಬವಾಗಿಸುವ ಮಾರಿ ಜಾತ್ರೆ
೨೦೧೪ರಲ್ಲಿ ಕಾರವಾರದ (Karwar) ಮಾಜಾಳಿಯಿಂದ ಕುಂದಾಪುರದವರೆಗೆ (Kundapura) ಸುಮಾರು ೧೮೭ ಕಿ.ಮೀ. ಚತುಷ್ಪದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಯಿತು. ಅಂದು ಉತ್ತರ ಕನ್ನಡದ ಭಾಗ್ಯದ ಬಾಗಿಲು ತೆರೆಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಗುತ್ತಿದಾರ ಕಂಪನಿಗಳು ಮಾಡಿದ ಅವೈಜ್ಞಾನಿಕ ಕಾಮಗಾರಿಯ ಅವಾಂತರಕ್ಕೆ ಹಾಗೂ ವಿಳಂಬ ನೀತಿಗೆ ಇದೇ ಹಾದಿಯಲ್ಲಿ ಅದೆಷ್ಟೋ ಜನರ ಮನೆಯ ಬೆಳಕು ಆರಿದೆ ಎಂಬ ಲೆಕ್ಕಚಾರಗಳು ಪೋಲಿಸ್ ಕಡತದಲ್ಲಿ ತಣ್ಣಗೆ ಮಲಗಿಕೊಂಡಿದೆ.
ವಿಡಿಯೋ ಸಹಿತ ಇದನ್ನೂ ಓದಿ : Mari Jathre/ ಅಳಿವೆಕೋಡಿಯಲ್ಲಿ ಮಾರಿ ಜಾತ್ರೆ ವೈಭವ
ಉತ್ತರ ಕನ್ನಡ ಜಿಲ್ಲೆ (Uttara Kannada) ಸಾಧಾರಣವಾಗಿ ರಾಜಕಾರಣಿಗಳಿಂದ ಹಿಡಿದು ಎಲ್ಲರಿಗೂ ತಾತ್ಸಾರವೆ. ಉತ್ತರ ಕನ್ನಡಕ್ಕೂ ಉತ್ತರ ಕರ್ನಾಟಕಕ್ಕೂ (North Karnataka) ವ್ಯತ್ಯಾಸ ಗೊತ್ತಿಲ್ಲದ ದಡ್ಡರಿಗೂ ಇಲ್ಲಿ ಬರಗಾಲವಿಲ್ಲ. ಇನ್ನೂ ಮುಂದುವರಿದು ಇಲ್ಲಿಯ ಜನರೂ ಹೆಚ್ಚಿನವರು ಕೊಂಚ ಶಾಂತ ಸ್ವಭಾವಿಗಳು. ಇದು ತಪ್ಪು ಕಲ್ಪನೆಯೂ ಇರಬಹುದು ಇಲ್ಲಿ ಯಾರು ಕೇಳುಗರಿಲ್ಲ ಎಲ್ಲ ಹೇಳುವವರೆ. ಜನ ಯಾವುದಕ್ಕೂ ಕೇರೆ ಅನ್ನಲ್ಲ. ಸಾವಿರಕ್ಕೊಬ್ಬೊಬ್ಬ ಲೀಡರುಗಳು ಆ ಸಲುವಾಗಿ ಈ ಭಾಗದಲ್ಲಿ ಹೋರಾಟಗಳು ಚಿಗುರೊಡೆಯುವ ಮುನ್ನ ಮುರುಟಿಕೊಳ್ಳುತ್ತದೆ ಅಂದರು ತಪ್ಪಿಲ್ಲ.
ವಿಡಿಯೋ ಸಹಿತ ಇದನ್ನೂ ಓದಿ : Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ
ಪ್ರಧಾನಿ ಮೋದಿಜಿಯವರ ಆಡಳಿತಾವಧಿಯಲ್ಲಿ ಎಲ್ಲವೂ ತ್ವರಿತ. ಅತ್ಯಂತ ವೇಗವಾಗಿ ಹೊಸ ಸಂಸತ್ ಭವನ ನಿರ್ಮಾಣವಾಗುತ್ತದೆ. ನೆನೆಗುದಿಗೆ ಬಿದ್ದ ಸೇತುವೆ ವರ್ಷಗಳಲ್ಲಿ ಉದ್ಘಾಟನೆ ಕಾಣುತ್ತದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳು ವರ್ಷದಲ್ಲಿ ಮೈದಳೆಯುತ್ತದೆ. ಆದರೆ ಉತ್ತರ ಕನ್ನಡಿಗರ ದುರಾದೃಷ್ಟವೋ ಎಂಬಂತೆ ಹೆದ್ದಾರಿ ಕಾಮಗಾರಿ ಕುಂಟುತ್ತಲೇ ಸಾಗುತ್ತಿದೆ. ಅಪಘಾತದಲ್ಲಿ ಮರಣ ಹೊಂದಿದರೆ ಒಂದು ತೆರನಾದ ದುಃಖ. ಶರೀರದಲ್ಲಿ ಯಾವುದಾದರೂ ಅಂಗ ಊನವಾಗಿ ಬದುಕು ನಡೆಸೋದು ಮತ್ತೊಂದು ಬಗೆಯ ಯಾತನೆ. ಇದೆಲ್ಲಾ ವಿಚಾರಕ್ಕೆ ಉತ್ತರ ಕನ್ನಡ ನಿರುತ್ತರವಾಗಿದೆ.
ಇದನ್ನೂ ಓದಿ : Protest/ ಅಂಡರ್ ಪಾಸ್ ಫಸ್ಟ್ , ರಸ್ತೆ ಅಗಲೀಕರಣ ನೆಕ್ಟ್ ಎಂದ ಸಾರ್ವಜನಿಕರು
ನಮಗೂ ದಕ್ಷಿಣ ಕನ್ನಡ (Dakshina Kannada) ಅಥವಾ ಉಡುಪಿ (Udupi) ಜಿಲ್ಲೆಗೂ ಇರುವ ವ್ಯತ್ಯಾಸಗಳು ಅತ್ಯಂತ ಸ್ಪಷ್ಟವಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಅದು ಎದ್ದು ಕಾಣಿಸುತ್ತದೆ. ಅಲ್ಲಿ ರಸ್ತೆ ನಿರ್ಮಾಣದ ಜತೆ ಜತೆಗೆ ಸರ್ವಿಸ್ ರೋಡುಗಳು, ಅಗತ್ಯ ಇದ್ದ ಎಲ್ಲಾ ಕಡೆಯೂ ಅಂಡರ್ ಪಾಸ್, ಮೇಲ್ಸೇತುವೆಗಳು, ಗಟಾರ ಕೆಲಸ ಎಲ್ಲವೂ ರಸ್ತೆ ನಿರ್ಮಾಣದ ಜತೆಜತೆಗೆ ಆಗುವುದಾದರೆ ಉತ್ತರ ಕನ್ನಡದಲ್ಲಿ ಅದೆಲ್ಲಾ ಯಾಕೆ ಸಾಧ್ಯವಿಲ್ಲ? ಉತ್ತರ ಕನ್ನಡಿಗರ ಮೇಲೆ ಈ ಪರಿ ತಾತ್ಸಾರ ಭಾವನೆ ತರವಲ್ಲ.
ಉತ್ತರ ಕನ್ನಡದಲ್ಲಿ ಹೋರಾಟಗಳು ಕೇವಲ ಪತ್ರಿಗೋಷ್ಠಿಗಷ್ಟೇ ಸೀಮಿತವಾಗುತ್ತಿದೆ. ಕೆಲವೇ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ತಯಾರಿಸಿ ಐ.ಆರ್.ಬಿ.ಯಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟವನ್ನು ಸಂಘಟಿಸುತ್ತೇವೆ ಎನ್ನುವ ಹೋರಾಟಗಾರರು ಕ್ರಮೇಣ ತಣ್ಣಗಾಗುತ್ತಿರುವುದೇಕೆ ಎಂಬ ಪ್ರಶ್ನೆಯೂ ತಲೆಕೊರೆಯುತ್ತದೆ.
ಉತ್ತರ ಕನ್ನಡವೆಂಬ ಸಾವಿನ ಮನೆಯ ಹೆಬ್ಬಾಗಿಲಿನಲ್ಲಿ ಸಾವು ನೋವುಗಳನ್ನು ಅನುಭವಿಸುವವರು ಅಂಕಿ ಅಂಶಗಳನ್ನು ಲೆಕ್ಕ ಹಾಕಿದಾಗ ಸ್ಥಳೀಯರ ಸಾವುಗಳೇ ಹೆಚ್ಚು. ಯಾಕೆಂದರೆ ಸಾಮಾನ್ಯವಾಗಿ ದೂರದಿಂದ ಬರುವವರು ದೊಡ್ಡ ವಾಹನಗಳನ್ನು ಏರಿ ಬರುತ್ತಾರೆ. ಪಾದಚಾರಿಗಳು ಅಥವಾ ಸಣ್ಣಪುಟ್ಟ ವಾಹನಗಳಲ್ಲಿ ತಿರುಗಾಡುವ ಸ್ಥಳೀಯರು ದೊಡ್ಡ ವಾಹನಕ್ಕೆ ಸಿಕ್ಕಿ ಸಾವನಪ್ಪುವ ಹಣೆ ಬರಹ ನಮ್ಮದು. ಅದರಲ್ಲೂ ಶಾಲೆ-ಕಾಲೇಜುಗಳು ಶುರುವಾಗುವ ಹಾಗೂ ಬಿಡುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಹೆದ್ದಾರಿ ದಾಟುವಾಗ ಅನುಭವಿಸುವ ಗೊಂದಲಗಳನ್ನು ಒಮ್ಮೆ ನಮ್ಮನ್ನಾಳುವ ಜನಪ್ರತಿನಿಧಿಗಳು ನಿಂತು ನೋಡಬೇಕು. ಹಾಗೇ ನಿಂತು ನೋಡಿದರೂ ಅವರ ಕಲ್ಲು ಹೃದಯಕ್ಕೆ ಇದೆಲ್ಲ ಬಾಧಿಸದು ಬಿಡಿ. ಯಾಕೆಂದರೆ ಅವರ ಮಕ್ಕಳು ಓಡಾಡುವುದು ಉನ್ನತ ಸುರಕ್ಷತೆ ಹೊಂದಿರುವ ದುಬಾರಿ ಕಾರುಗಳಲ್ಲಿ ಅಲ್ಲವೇ?
ವಿಡಿಯೋ ಸಹಿತ ಇದನ್ನೂ ಓದಿ : Protest/ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಸಂಸದರು ಒಮ್ಮೆ ರಸ್ತೆ ಕಾಮಗಾರಿ ನಿರ್ಮಾಣವಾದ ನಂತರ ಹೆಚ್ಚುವರಿ ಹಣಕಾಸನ್ನು ಮಂಜೂರು ಮಾಡಿಸಿಕೊಂಡು ಬಂದು ಕೆಲಸ ಮಾಡಿಸುವ ಭರವಸೆ ನೀಡುತ್ತಾರೆ. ಸಮಸ್ಯೆಗಳು ಕಣ್ಣಿಗೆ ರಾಚುವ ಹೊತ್ತಲ್ಲೇ ಕೆಳಸೇತುವೆ ನಿರ್ಮಾಣಕ್ಕೆ ಹಿಂದೇಟು ಹಾಕುವ ನೀವು ಇನ್ನು ಸಂಪೂರ್ಣ ಕಾಮಾಗಾರಿ ಮುಗಿದ ನಂತರ ಮತ್ತೆ ಕಾಮಗಾರಿ ಹಣವನ್ನು ಮಂಜೂರಿ ಮಾಡುತ್ತೀರಿ. ಆ ಮಂಜುರಾದ ಹಣದಿಂದ ನಂಬಿಕೆಗೆ ಅರ್ಹವಲ್ಲದ ಗುತ್ತಿಗೆದಾರ ಕಂಪನಿಗಳು ವೈಜ್ಞಾನಿಕವಾಗಿ, ತ್ವರಿತವಾಗಿ ಕಾಮಗಾರಿ ನಡೆಸುತ್ತಾರೆನ್ನುವ ಭರವಸೆಯನ್ನು ಜನ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
(Readers letter)