ಭಟ್ಕಳ: ಮಕ್ಕಳ ಸಂತೆಯು (Makkala Santhe) ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವ್ಯಾವಹಾರಿಕ ಜಾಣ್ಮೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು ತೋರಿದ ಚೌಕಾಸಿ ವ್ಯವಹಾರ, ಲೆಕ್ಕಾಚಾರ ಹಾಗೂ ಗ್ರಾಹಕರೊಂದಿಗೆ ಸಂವಹನದ ಕೌಶಲ್ಯಗಳಿಗೆ ಸಾರ್ವಜನಿಕರು ಭೇಷ್ ಎಂದರು. ಭಟ್ಕಳ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿ ನಂ–1ರಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ (Makkala Santhe) ಈ ಮನಮೋಹಕ ದೃಶ್ಯಗಳು ಕಂಡುಬಂದವು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ಶಾಲೆಯ ಎಸ್‌.ಡಿ‌.ಎಂ‌.ಸಿ ಅಧ್ಯಕ್ಷ ರಾಜೇಶ ನಾಯ್ಕ ಉದ್ಘಾಟಿಸಿ ಮಾತನಾಡಿ, “ಮಕ್ಕಳಿಗೆ ಪಠ್ಯಜ್ಞಾನ ಮಾತ್ರವಲ್ಲದೆ ವ್ಯಾವಹಾರಿಕ ಜ್ಞಾನವೂ ಅಗತ್ಯ. ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರು ಲೆಕ್ಕಾಚಾರ, ಗ್ರಾಹಕ ವ್ಯವಹಾರ ಹಾಗೂ ಸ್ವಾವಲಂಬನೆಯ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳ ಸಂತೆ ವಿನೋದಕ್ಕೆ ಮಾತ್ರ ಸೀಮಿತವಲ್ಲ; ಇದು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕ” ಎಂದು ಹೇಳಿದರು.

ಈ ಸುದ್ದಿಯ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ  ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನು ಓದಿ: Outrage/ ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ 

ಮಕ್ಕಳು ಚುರುಮುರಿ, ಬೇಲ್‌ಪುರಿ, ಪಾನಿಪೂರಿ, ಸೌತೇಕಾಯಿ, ಹಣ್ಣಿನ ಜ್ಯೂಸ್, ಕುರುಕಲು ತಿಂಡಿಗಳು, ಸಿಹಿ ತಿನಿಸುಗಳು, ಚಿಪ್ಸ್, ಮಸಾಲ ಮಜ್ಜಿಗೆ, ರವೆ ಉಂಡೆ, ಹೆಸರುಬೇಳೆ ಸೇರಿದಂತೆ ವಿವಿಧ ಆಹಾರ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ನಡೆಸಿದರು. ಮನೆಗಳಲ್ಲಿ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡುವಾಗ ವಿದ್ಯಾರ್ಥಿಗಳು ತೋರಿದ ಜಾಣ್ಮೆ ಪೋಷಕರ, ಗ್ರಾಮಸ್ಥರ ಗಮನ ಸೆಳೆಯಿತು. ಸರ್ಕಾರಿ ಶಾಲೆಯ ಮಕ್ಕಳ ಸಂತೆಗೆ ಪೋಷಕರು ಸ್ವಯಂಪ್ರೇರಿತವಾಗಿ ಸಹಕಾರ ನೀಡಿದ್ದು ವಿಶೇಷವಾಗಿತ್ತು.

ಇದನ್ನು ಓದಿ: Bhatkal Food Festival/ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವ

ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ವಿವಿಧ ತಿನಿಸುಗಳನ್ನು ಸವಿದರು. ಸಂತೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, “ನಾವು ಸ್ವತಃ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿದ್ದು ಸಂತಸ ತಂದಿದೆ. ಇಲ್ಲಿ ಕಲಿತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇದು ಉತ್ತಮ ವೇದಿಕೆ” ಎಂದು ಅಭಿಪ್ರಾಯಪಟ್ಟರು.

ಇದನ್ನು ಓದಿ: Sharavathi pumped storage/ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದ್ದೇನು? 

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ ನಾಯ್ಕ, ಉಪಾಧ್ಯಕ್ಷ ಜಗದೀಶ ಆಚಾರಿ, ಎಸ್‌.ಡಿ‌.ಎಂ‌.ಸಿ ಉಪಾಧ್ಯಕ್ಷೆ ಪವಿತ್ರಾ ಮೊಗೇರ, ನಿವೃತ್ತ ಅಂಚೆ ಅಧಿಕಾರಿ ನಾರಾಯಣ ದೊಡ್ಮನೆ, ದಿನೇಶ ನಾಯ್ಕ, ಮುಖ್ಯ ಶಿಕ್ಷಕಿ ಪಾರ್ವತಿ ದೇವಡಿಗ, ಶಿಕ್ಷಕ ಗಣೇಶ ಹೆಗಡೆ ಸೇರಿದಂತೆ ಶಾಲೆಯ ಶಿಕ್ಷಕರು, ಎಸ್‌.ಡಿ‌.ಎಂ‌.ಸಿ ಸರ್ವ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

ಇದನ್ನು ಓದಿ: Ranginkatte/ ರಂಗಿನಕಟ್ಟೆ ಅಶ್ವತ್ಥ ಮರ ತೆರವು ಯಾವಾಗ ಗೊತ್ತಾ?